Tuesday, 29 April 2014

ಪಂಕ್ತಿ ಭೊಜನದ ಸುತ್ತಮುತ್ತ

ಉಡುಪಿಯಲ್ಲಿ ಊಟದ ಮಧ್ಯೆ ಬ್ರಾಹ್ಮಣಳಲ್ಲವೆಂಬ ಕಾರಣಕ್ಕೆ ಓರ್ವ ಮಹಿಳೆಯನ್ನು ಊಟದ ಪಂಕ್ತಿಯಿಂದ ಹೊರಹಾಕಿದ ಘಟನೆ ಬಹಳ ಚರ್ಚೆಯನ್ನು ಹುಟ್ಟುಹಾಕಿದೆ. ಆದರೆ ಆ ಘಟನೆಯನ್ನು ವಿಶ್ಲೇಶಿಸುವ ಸಂದರ್ಭದಲ್ಲಿ ಪರ ಹಾಗೂ ವಿರೋಧದ ಬಗ್ಗೆ ನಡೆದ ಚರ್ಚೆಗಳು ತೀರ ಬಾಲಿಶವಾಗಿಯೂ, ಅನುಚಿತವಾಗಿಯೂ ಇದ್ದಂತೆ ಕಂಡುಬಂದಿತು;ಒಂದು ರೀತಿಯಲ್ಲಿ ನಿಷ್ಪ್ರಯೋಜಕವೂ ಹೌದು. ಪರವಾಗಿ ವಾದಿಸಿದ ಬಹುತೇಕರು ಹೇಳಿದ್ದೇನೆಂದರೆ ಊಟ ಎನ್ನುವದು ಬ್ರಾಹ್ಮಣರಿಗೆ ಯಜ್ನ ಇದ್ದಂತೆ ಹಾಗೂ ಅನೇಕ ವಿಧಿ ವಿಧಾನಗಳನ್ನು ಅನುಸರಿಸಬೇಕಾದ್ದರಿಂದ ಬ್ರಾಹ್ಮಣರಿಗೆ ಬೇರೆಯದೆ ಪಂಕ್ತಿಭೋಜನ ಸರಿ ಎಂದು. ಇದನ್ನು ವಿರೋಧಿಸಿ ಹೇಳಿದವರಲ್ಲಿ ಇದೊಂದು ಅಮಾನವೀಯ, ಹಿಂದೂ ಧರ್ಮಕ್ಕೆ ತೊಡಕು, ಜಾತ್ಯಾತೀತವಲ್ಲ ಇತ್ಯಾದಿ ಹೇಳಿಕೆಗಳು. ಬಹುತೇಕವಾಗಿ ಎಲ್ಲರೂ ಜಾತ್ಯಾತೀತದ ಆಧಾರದ ಮೇಲೆ ಇದನ್ನು ವಿರೋದಿಸಿದ್ದಾರೆ. ಬ್ರಾಹ್ಮಣ, ಶೂದ್ರ ಇತ್ಯಾದಿಯಾಗಿ ಹೈಪೊಥೆಟಿಕಲ್ ಥಿಯರಿಯನ್ನು ಹೊಂದಿದ್ದವನಿಗೆ ಈ ಘಟನೆ ಹೊಸ ಫಾರ್ಮುಲಾದ ಅವಿಷ್ಕಾರವನ್ನು ನೀಡಿರಬಹುದು. ಇದಕ್ಕೂ ಮೀರಿದ ರೀತಿಯಲ್ಲಿ ಪಂಕ್ತಿಭೇದದ ಬಗ್ಗೆ ವಿವರಣೆಯನ್ನು ನೀಡಬಹುದಾದರೆ ನೈಜ್ಯತೆಯ ಬಗ್ಗೆ ಪರಿಶೀಲಿಸಲು ಅನುಕೂಲವಾಗಬಹುದು.
ಪಂಕ್ತಿಭೇದದ ಪರ ವಾದಿಸುವವರನ್ನು ತೆಗೆದುಕೊಂಡರೆ ಅವರ ಪ್ರಕಾರ ಬ್ರಾಹ್ಮಣರ ಊಟ ಎಂಬುದು ಯಜ್ನ. ಈ ವಿಧಿ ವಿಧಾನದ ಆಚರಣೆಗೋಸ್ಕರ ಪ್ರತ್ಯೇಕ ಪಂಕ್ತಿಭೋಜನದ ಅಗತ್ಯತೆಯನ್ನು ವಿವರಿಸುತ್ತಾರೆ. ಆದರೆ ಅದು ನಿಜವಾದಲ್ಲಿ, ಎಲ್ಲಾ ಬ್ರಾಹ್ಮಣರೂ ಎಲ್ಲಾ ಪ್ರದೇಶದಲ್ಲಿಯೂ, ಎಲ್ಲಾ ಸಂದರ್ಭದಲ್ಲಿಯೂ ಅಂತಹ ಆಚರಣೆಗಳನ್ನು ಅನುಸರಿಸಬೇಕಾಗಿತ್ತು. ಆದರೆ ಇಂತಹ ಆಚರಣೆಗಳನ್ನು ಕಟ್ಟುನಿಟ್ಟಾಗಿ ಆಚರಿಸುವ ಬ್ರಾಹ್ಮಣರು ತೀರ ಅತ್ಯಲ್ಪ;ದೇವಾಲಯ, ಮಠಗಳಲ್ಲಿರುವ ಕೆಲವೇ ಮಂದಿ ಮಾತ್ರ. ಉಳಿದವರು ಕಟ್ಟುನಿಟ್ಟಾಗಿ ಆಚರಣೆಗಳನ್ನು ಪಾಲಿಸುವವರಲ್ಲ. ಎಷ್ಟೊ ಸಮಯದಲ್ಲಿ ಹೊಟೆಲ್ ಗಳಲ್ಲಿ ತಿನ್ನುವದು ಸಾಮಾನ್ಯವೆ. ಅಲ್ಲೆಲ್ಲಾ ಪಂಕ್ತಿಬೇದಗಳೂ ಲೆಕ್ಕಕ್ಕಿರುವದಿಲ್ಲ, ಅಡುಗೆ ಮಾಡಿದ ಜನರ ಕುಲ ಗೋತ್ರಗಳೂ ಲೆಕ್ಕಕ್ಕಿರುವದಿಲ್ಲ. ಊಟದ ಆಚರಣೆ/ಪದ್ದತಿಗಳೂ ಅನುಸರಿಸಲೇಬೇಕಾದ ಯಜ್ನವೆಂಬಂತೆ ಎಲ್ಲಾ ಬ್ರಾಹ್ಮಣರಿಗೆ ತೋರುವದೂ ಇಲ್ಲ. ಕೆಲವು ದಿವಸಗಳಲ್ಲಿ, ಕೆಲವು ಸಂದರ್ಭಗಳಲ್ಲಿ, ಕೆಲವು ಸ್ಥಳಗಳಲ್ಲಿ ಮಾತ್ರ ಆ ಸ್ಥಳದ ಸಂಪ್ರದಾಯ ಎಂಬಂತೆ ಪಾಲಿಸುತ್ತಾರೆ.  ಹಾಗಾಗಿ, ಉಡುಪಿ ಮಠದಲ್ಲಿನ ಪಂಕ್ತಿಭೇದ ಆ ಸ್ಥಳಕ್ಕೆ, ಸಂದರ್ಭಕ್ಕೆ ಮಾತ್ರ ಸೀಮಿತವಾಗಿರುವದೇ ಹೊರತು, ಬ್ರಾಹ್ಮಣ ಆಚರಣೆ/ವಿಧಿ ವಿಧಾನಗಳು, ಯಜ್ನ ಎಂಬೆಲ್ಲಾ ಕಾರಣ ಕೊಟ್ಟು ಸಮರ್ಥಿಸುವದು ಹಾಸ್ಯಾಸ್ಪದ.
ಇನ್ನು ಇದನ್ನು ವಿರೋಧಿಸುವವರಲ್ಲಿ ಬೇರೆ ಬೇರೆಯ ಗುಂಪಿಗೆ ಸೇರಲ್ಪಟ್ಟವರಿದ್ದಾರೆ. ಪ್ರೊಟೆಸ್ಟಂಟ್ -ಹಿಂದೂಗಳು, ರಾಜಕೀಯ ಹಿತಾಸಕ್ತರು, ಹಾಗೂ ಸಾಮಾಜಿಕ ಚಳುವಳಿಗಳಿಂದ, ಅಧ್ಯಯನಗಳಿಂದ ಪ್ರೇರೆಪಿತಗೊಂಡವರು. ಈ ಮೂರು ಗುಂಪುಗಳಲ್ಲಿ ನನಗೆ ಉತ್ತರಿಸಲೇಬೇಕಾದ ಅನಿವಾರ್ಯತೆ ಇದ್ದಂತೆ ತೋರುವದು ಪ್ರೊಟೆಸ್ಟಂಟ್ -ಹಿಂದೂಗಳಿಗೆ. ಈ ಬಗ್ಗೆ ಪ್ರೊಟೆಸ್ಟಂಟ್-ಹಿಂದುಗಳ ಕಾಳಜಿ, ಪ್ರಾಮಾಣಿಕತೆ ಅಭಿನಂದನೀಯ. ಅದರೆ ಇಂತಹ ಘಟನೆಯನ್ನು ಅವಲೋಕಿಸುವಲ್ಲಿ ಅವರ ಉತ್ಪ್ರೇಕ್ಷಣೀಯ ನಿಲುವು, ಅಸಹನೆ ಅನಗತ್ಯ ಅನಿಸುತ್ತದೆ. ಪ್ರೊಟೆಸ್ಟಂಟ್-ಹಿಂದುಗಳ ಪ್ರಕಾರ ಜಾತಿಗಳ ನಡುವಿನ ಈ ಕಂದಕ ಅವರ ಹಿಂದುಯಿಸ್ಮ್ ಗೆ ಮಾರಕ. ಹಾಗಾಗಿ ಪಂಕ್ತಿಭೇದವನ್ನು ಉಗ್ರವಾಗಿ ಖಂಡಿಸುವದು ಅವರ ಆದ್ಯತೆ. ಅವರ ಹಿಂದುಯಿಸ್ಮ್ ನ ಪರಿಕಲ್ಪನೆಯಲ್ಲಿ ಈ ನಿಲುವು ಸ್ವಾಗತಾರ್ಹ ಹೌದು. ಆದರೆ, ಈ ದಿಸೆಯಲ್ಲಿ ತಮ್ಮ ಕಲ್ಪನೆಯ ಹಿಂದುಯಿಸ್ಮ್ ನೊಳಗೆ ಉಡುಪಿ ಮಠ (ಅಥವಾ ಉಡುಪಿ ಮಠಗಳಂತಿರುವ ಉಳಿದ ಮಠಗಳನ್ನು) ಸೇರಿದೆ ಎಂದು ಊಹಿಸಿಕೊಂಡು, ತಮ್ಮದೇ ಹಿಂದುಯಿಸ್ಮ್ ನ ಆದರ್ಶಗಳನ್ನು ಅನಿರ್ಭಂದಿತವಾಗಿ(unconditionally) ಉಡುಪಿ ಮಠಗಳಂತ ಧಾರ್ಮಿಕ ಸಂಸ್ಥೆಗಳಿಂದ ಅಪೇಕ್ಷಿಸುತ್ತಿರುವದು ಅವರ ಅಸಹನೆಗೆ ಮೂಲ ಕಾರಣ. ಉದಾರಣೆಗೆ ಒಂದು ಹಳ್ಳಿ ಇದೆ ಅಂದುಕೊಳ್ಳಿ. ಆ ಹಳ್ಳಿಯ ಜನರು ಒಂದಿಲ್ಲೊಂದು ರೀತಿಯಿಂದ ಪರಸ್ಪರ ಅವಲಂಬನೆಯಿಂದಲೋ ಪರಸ್ಪರ ಹತ್ತಿರವಿದ್ದಿರುತ್ತಾರೆ. ಅವರವರೊಳಗೆ ಒಂದು ಅಲಿಖಿತ ನಾರ್ಮ್ ಬೆಳೆದುಬಂದಿರುತ್ತದೆ. ಹಾಗಿದ್ದಾಗ ಆ ಹಳ್ಳಿಯವನೊಬ್ಬ ಭಿನ್ನವಾದ ರೀತಿ ರಿವಾಜುಗಳನ್ನು ಬೆಳೆಸಿಕೊಂಡನೆಂದರೆ ಉಳಿದವರಿಗೆ ಅಸಹನೆಯಾಗತೊಡಗುತ್ತದೆ. ಆತ ತಮ್ಮಿಂದ ದೂರವಾಗುತ್ತಿದ್ದಾನೆ ಎಂಬುದೆ ಅವರ ಆತಂಕವಾಗುತ್ತದೆ. ಆತನೂ ಆ ಹಳ್ಳಿಯ ನೀತಿ ಸಂಹಿತೆಯ ಭಾಗವಾಗಿರಲೇಬೇಕು ಎನ್ನುವದು ಅವರ ಹಠವಾಗಿರುತ್ತದೆ. ಇಂತಹುದೆ ಮಾನಸಿಕ ಸನ್ನಿವೇಶ ಪ್ರೊಟೆಸ್ಟಂಟ್ -ಹಿಂದೂಗಳಲ್ಲಿ ಮೂಡಿದೆ. ಉಡುಪಿ ಮಠ ಹಾಗೂ ಇನ್ಯಾವುದೇ ಹಿಂದೂಗಳ ಅಂಗಗಳೆಂದು ಗುರುತಿಸಲ್ಪಡುವ ಸಂಸ್ಥೆಗಳು ಅವರ ಕಲ್ಪನೆಯ ಹಿಂದೂ ಧರ್ಮವನ್ನು ಪ್ರತಿನಿಧಿಸಲೆಬೇಕು ಎಂದು ತಮ್ಮಷ್ಟಕ್ಕೆ ತಾವೇ ಅಂದುಕೊಳ್ಳುತ್ತಾರೆ. ಹಾಗಿದ್ದಾಗ ಅಲ್ಲಿ ನಡೆಯುತ್ತಿರುವ ಪಂಕ್ತಿಬೇಧವಾಗಲೀ ಅಥವಾ ಅವರ ಬೇರಾವುದೇ ಅವರ ಹಿಂದುಯಿಸ್ಮ್ ಗೆ ವಿರುದ್ಧವೆನಿಸಿದ ಪದ್ದತಿಗಳು ಹಿಂದುಯಿಸ್ಮ್ ನಲ್ಲಿನ ಬಿರುಕು ಎಂದು ಭ್ರಮನಿರಸನಗೊಳ್ಳುತ್ತಾರೆ. ಅವರಿಗೆ ನಾನಿದಿಷ್ಟನ್ನೆ ಹೇಳಬಯಸುತ್ತೇನೆ. 'ನಿಮ್ಮ ಹಿಂದುಯಿಸ್ಮ್ ನ ಕಲ್ಪನೆಗೆ ಸ್ಪಷ್ಟವಾದ ರೂಪ ಕೊಡಿ. ಅದಕ್ಕೆ ಹೊರತಾದ ಪದ್ದತಿ ಆಚರಣೆಗಳನ್ನು ಅನುಸರಿಸುವ ಸಂಪ್ರದಾಯವಾದಿಗಳನ್ನು ಮಠ, ಸಂಸ್ಥೆಗಳನ್ನು ನಿಮ್ಮ ಲಿಸ್ಟ್ ನಿಂದ ಹೊರಹಾಕಿ. ಹೆಚ್ಚೆಂದರೆ ಅವರನ್ನು ಮನವೊಲಿಸಿ ನಿಮ್ಮ ಲಿಸ್ಟ್ ನೊಳಗೆ ಸೇರಿಸಿಕೊಳ್ಳಲು ನಿಮ್ಮದೆ ಮಿಶನ್ ನಡೆಸಿರಿ. ಅವರಿಗೆ ನಿಮ್ಮ ರಾಜಕೀಯ, ಸಾಮಾಜಿಕ ಅಗತ್ಯ ಇದ್ದರೆ ನಿಮ್ಮನ್ನು ಅನುಸರಿಸುತ್ತಾರೆ, ಇಲ್ಲದಿದ್ದಲ್ಲಿ ಬೇರೆಯಾಗುತ್ತಾರೆ. ಇನ್ನು ಆ ಮಠ ನ್ಯಾಯಯುತವಾಗಿ ಸಾರ್ವಜನಿಕ ಸ್ವತ್ತಾಗಿದ್ದರೆ, ಅದನ್ನು ಸಾರ್ವತ್ರೀಕರಣಗೊಳಿಸಲು ಕಾನೂನು ಹೋರಾಟ ಮಾಡಿ. ಅದರ ಬದಲು ಅಂತಹ ಮಠ, ಸಂಸ್ಥೆಗಳನ್ನು ನಿಮ್ಮ ಕಲ್ಪನೆಯ ಆದರ್ಷ ಹಿಂದುಯಿಸ್ಮ್ ನ ಭಾಗವಾಗಿ, ಅಥವಾ ವಾರಸುದಾರರಾಗಿ ನೋಡಲು ಬಯಸಿದರೆ ಅಂತಹ ನಿಮ್ಮ ಪ್ರಯತ್ನ ಹುರುಳಿಲ್ಲದ್ದು. ನಾಳೆ ಯಾವುದೋ ಒಂದು ದೇವಸ್ಥಾನದಲ್ಲಿ ತೀರ್ಥದ ಬದಲು ಕೋಕ್, ಪೆಪ್ಸಿ ಕೊಡಬಹುದು, ಪೂಜೆಯ ವಿಧಿ ವಿಧಾನವನ್ನು ನಿಮ್ಮ ಕಲ್ಪನೆಗೆ ವ್ಯತಿರಿಕ್ತವಾಗಿ ಆಚರಿಸಬಹುದು. ಆಗೆಲ್ಲ ಅದನ್ನು ವಿರೋಧಿಸಲು, ಚರ್ಚಿಸಲು, ನಿಮ್ಮ ದಂಡಿನೊಂದಿಗೆ ತೆರಳಬೇಕಾಗಬಹುದು. ನಿಮ್ಮ ಹಿಂದುತ್ವದ ಅಸ್ತಿತ್ವವನ್ನು ಉಡುಪಿ ಮಠದಲ್ಲಿಟ್ಟು ಅವರಿಂದ ನಿಮ್ಮ ಆದರ್ಷಗಳನ್ನು ನಿರೀಕ್ಷಿಸುವದು ಮೂರ್ಖತನ. ಅದು ನೀವು ಅವರ ಮೇಲೆ ಅವಲಂಬಿತರಾಗಿದ್ದೀರಿ ಎನ್ನುವದನ್ನು ಸ್ಪಷ್ಟ ಪಡಿಸುತ್ತದೆ. ಹಾಗಾಗಬಾರದು. ಅವರು ನಿಮ್ಮ ಮೇಲೆ ಅವಲಂಬಿತರಾಗುವಂತೆ ಮಾಡಬೇಕೆ ಹೊರತೂ ನೀವು ಅವರ ಅವಲಂಬಿಗಳಾಗಕೂಡದು. ನಿಮ್ಮ ಹಿಂದೂ ನೀತಿ ಸಂಹಿತೆಯನ್ನು ನಿಮ್ಮ ಆದರ್ಷಗಳನ್ನು ಒಪ್ಪುವ ಅಂಗ ಸಂಸ್ಥೆಗಳಿಗೆ ಮಾತ್ರ ಸೀಮಿತಗೊಳಿಸಿರಿ. ನಿಮ್ಮ ನೀತಿ ಸಂಹಿತೆಗಳನ್ನು ಎಲ್ಲಾ ಹಿಂದೂ ಅಂಗ ಸಂಸ್ಥೆಗಳೂ ಒಪ್ಪಲೆಬೇಕೆನ್ನುವ ಮನಸ್ಥಿತಿಯೆ ನಿಮ್ಮ ಗೊಂದಲಗಳಿಗೆ ಕಾರಣ’.
ಇನ್ನು ಮಾನವೀಯ ಕಾರಣಗಳಿಗಾಗಿ ವಿರೋಧಿಸುವವರು ’ಮಾನವೀಯತೆ’ ಎಂಬುದರ ಬಗ್ಗೆ ಸ್ಪಷ್ಟ ವಿವರಣೆ ಹೊಂದಿರುವದಿಲ್ಲ. ಒಬ್ಬ ಸೆಕಂಡ್ ಕ್ಲಾಸ್ ನಲ್ಲಿ ಟಿಕೆಟ್ ತೆಗೆದುಕೊಂಡವನು ಬಾಲ್ಕನಿಗೆ ಹೋಗಿ ಕುಳಿತುಕೊಂಡರೆ ಆತನನ್ನು ಮಧ್ಯದಲ್ಲಿ ಎಬ್ಬಿಸಬಹುದು. ಆಗ ಅದು ನಮಗೆ ಅಮಾನವೀಯ ಎಂದೆನಿಸದೇ ಇರಬಹುದು. ಹಾಗೆ ಸಮಾಜದಲ್ಲಿನ ಎಷ್ಟೊ ಅಂತರಗಳಲ್ಲಿನ ಜೀವನಗಳನ್ನು ನಾವು ಕೆಲವೊಮ್ಮೆ ಒಪ್ಪಿಕೊಳ್ಳುತ್ತೇವೆ, ಕೆಲವೊಮ್ಮೆ ಅದು ಸಾಮಾನ್ಯ ಎಂದು ನಿರ್ಲಕ್ಷಿಸುತ್ತೇವೆ ಅಥವಾ ವಿರೋಧಿಸಲೂಬಹುದು. ಆಗೆಲ್ಲಾ ನಮ್ಮ ಜೀವನದ ಸಾಂಸ್ಕೃತಿಕ, ವೈಯಕ್ತಿಕ ಜೀವನದ ಹಿನ್ನೆಲೆಗಳು ಪೂರಕವಾಗಿರುತ್ತದೆ. ಅವು ನಮ್ಮಲ್ಲಿ ಒಂದು ಕಾನ್ಷಿಯಸ್ ನೆಸ್ ಅನ್ನು ಹುಟ್ಟುಹಾಕಿಬಿಡುತ್ತದೆ. ಒಬ್ಬಳು ಹುಡುಗಿ ಒಬ್ಬ ಹುಡುಗನನ್ನು ಕರಿಯ ಎಂಬ ಕಾರಣಕ್ಕೆ ಆತನನ್ನು ಮದುವೆಯಾಗಲು ನಿರಾಕರಿಸಿದರೆ ರೇಸ್ ಕಾನ್ಷಿಯಸ್ ನೆಸ್ ಇರುವ ಸುಧಾರಣಾವಾದಿ ಹಿನ್ನೆಲೆಯಿಂದ ಬಂದಿರುವವನಿಗೆ ಇದೊಂದು ಅತಿ ಅಮಾನವೀಯ ಅನಿಸುತ್ತದೆ. ಒಂದು ವೇಳೆ ಆತ ಆರ್ಥಿಕವಾಗಿ ಪ್ರಬಲನಲ್ಲ ಎಂಬ ಕಾರಣಕ್ಕೆ ನಿರಾಕರಿಸಿದರೆ ಕ್ಲಾಸ್ ಕಾನ್ಷಿಯಸ್ ನೆಸ್ ಇರುವ ಸುಧಾರಣವಾದಿಗೆ ಅದು ಅಮಾನವೀಯ ಎಂದೆನಿಸಬಹುದು. ಆತ ಓದಿಲ್ಲ, ಅಶಿಕ್ಷಿತ ಎಂಬ ಕಾರಣಕ್ಕೆ ನಿರಾಕರಿಸಿದರೆ ಅದು ಅವರಿಬ್ಬರಿಗೂ ರೀಸನೇಬಲ್ ಎನಿಸಬಹುದು. ಆದರೆ ಅಶಿಕ್ಷಿತ-ಸುಶಿಕ್ಷಿತ ಅಂತರದ ಸಮಾಜದಿಂದ ಒಬ್ಬ ಬೆಳೆದುಬಂದವನಿದ್ದರೆ, ಹಾಗೂ ಆತ ಅಶಿಕ್ಷಿತರ ಪರ ಹೋರಾಟ ನಡೆಸಿದ್ದರೆ, ಆತನಿಗೆ ಅಶಿಕ್ಷಿತ ಎಂಬ ನಿರಾಕರಣೆಯು ಅಮಾನವೀಯ ಎಂದು ಅಗತ್ಯವಾಗಿ ಎನಿಸುತ್ತದೆ. ನನ್ನ ಪರಿಚಯದೊಬ್ಬರ ಬ್ರಾಹ್ಮಣರ ಮನೆಯಲ್ಲಿ ಮನೆಯ ವಯಸ್ಸಾದವರೊಬ್ಬರು ಮರಣ ಹೊಂದಿದರು. ’ಸೂತಕ’ ಎನ್ನುವದನ್ನು ಅಲ್ಲಿನ ಬ್ರಾಹ್ಮಣರಷ್ಟೆ ಅಲ್ಲ, ಬ್ರಾಹ್ಮಣೆತರರೂ ನಂಬುತ್ತಾರೆ. ಬ್ರಾಹ್ಮಣೆತರಳಾದ ಅವರ ಮನೆಯ ಕೆಲಸದವಳು ಆ ಮನೆಯಲ್ಲಿ ೧೧ ದಿನಗಳ ತನಕ ನೀರನ್ನೂ ಕುಡಿಯಲಿಲ್ಲ. ಮನೆಯ ಜನರನ್ನು, ಬಟ್ಟೆಬರೆಗಳನ್ನು ಮುಟ್ಟಿಸಿಕೊಳ್ಳುವದಂತೂ ಸಾಧ್ಯವೇ ಇರಲಿಲ್ಲ. ನನಗೆ ಆಶ್ಚರ್ಯವಾಗಿ ಮನೆಯವರನ್ನು ಕೇಳಿದಾಗ ಅವರು ಉತ್ತರಿಸಿದರು. ಆ ಕೆಲಸದಾಕೆಯ ಜಾತಿಯವರು, ದೆವ್ವವನ್ನು ಬಹಳವಾಗಿ ನಂಬುತ್ತಾರಂತೆ. ಹಾಗಾಗಿ ಸೂತಕದ ದಿನಗಳಲ್ಲಿ ಕೆಲಸದವಳ ಪಾಲಿಗೆ ಇವರು ಬ್ರಾಹ್ಮಣರಾದಾಗ್ಯೂ ಅಸ್ಪೃಶ್ಯರೆ! ಇದನ್ನು ಆ ಮನೆಯವರು ಅಸ್ಪೃಶ್ಯತೆ, ಅಮಾನವೀಯ  ಎಂದು ಕಣ್ಣೀರಿಟ್ಟಿಲ್ಲ. ಯಾಕೆಂದರೆ ಇದನ್ನು ಸಂಸ್ಕೃತಿಯ ಭಾಗವೆಂಬಂತೆ ಅರ್ಥೈಸಿಕೊಳ್ಳುತ್ತಾರೆ. ಮೂರನೆಯವನಿಗೆ ಇದು ಅಮಾನವೀಯವಾಗಿ ಕಂಡರೆ ಅದು ಮಾನವೀಯತೆಯ ಬಗೆಗಿನ ಆತನ ಚಿಂತನೆಯ ಕೊರತೆ.
ಹಾಗಾಗಿ, ಹೀಗೆ ಬೇರೂರಿದ ಕಾನ್ಷಿಯಸ್ ನೆಸ್ ಹಾಗೂ ಅದು ಹುಟ್ಟುಹಾಕಿದ ಮೌಲ್ಯಗಳು ಆಯಾ ಪ್ರದೇಶ, ಸಂಸ್ಕೃತಿ, ಕಾಲಕ್ಕನುಸಾರವಾಗಿ ಬದಲಾವಣೆಯಾಗುತ್ತದೆ. ನಾವು ಆಯಾ ಸಂಸ್ಕೃತಿಗಳಲ್ಲಿ ಕಾಣಸಿಗದ ಕೆಲವು ಮೌಲ್ಯಗಳು ಸಾರ್ವತ್ರಿಕವಾಗಿರಲೇಬೇಕು ಎಂದು ಆಶಯಿಸಿದಾಗ ಇಂತಹ ಆಚರಣೆಗಳು, ಅಮಾನವೀಯ, ಭ್ರಷ್ಟ ಎಂಬ ನಿಲುವಿಗೆ ಬರುತ್ತೇವೆ. ಹಾಗಾಗಿ ಅದನ್ನು ’ಮಾನವೀಯ’ ನೆಲೆಗಟ್ಟಿನಲ್ಲಿ ತಪ್ಪು ಸರಿ ಎಂದು ನಿರ್ಣಯಿಸುವದು ಬಾಲಿಷತನ.
ಇನ್ನು ಮೂರನೆಯದಾಗಿ ಜಾತ್ಯಾತೀತದ ಬಗ್ಗೆ ಬಾಯಿಪಾಠ ಒಪ್ಪಿಸುವ ಕೆಲವು ಚಳುವಳಿ ಪ್ರೇರಿತ ಗುಂಪುಗಳಿವೆ. ಜಾತ್ಯಾತೀತತೆಯ ಬಗ್ಗೆ ತಮ್ಮ ಅಧ್ಯಯನಗಳ ಕೊರತೆಯನ್ನು ನೀಗಿಸಬೇಕಾದ ಪ್ರಾಮಾಣಿಕ ಪ್ರಯತ್ನವನ್ನು ಇವು ಮಾಡಬೇಕಾಗಿದೆ. ಊಹೆಗಳ ಆಧಾರದ ಮೇಲೆ ನಿಂತ ಇವರ ಅಧ್ಯಯನ, ಜಾತಿಗಳ ಸ್ಟೀರಿಯೋಟೈಪುಗಳನ್ನು ಹುಟ್ಟಿಹಾಕಿರುತ್ತದೆ. ಹಾಗಾಗಿ ಪುಸ್ತಕ ಪಠ್ಯದಲ್ಲಿ ಜಾಜಿಗಳ ಬಗ್ಗೆ ಓದಿದಾಗ ಹಾಗೂ ನಮ್ಮ ಸುತ್ತಮುತ್ತಲಿನ ಜಾತಿಗಳ ಬಗ್ಗೆ ನಮ್ಮ ಅನುಭವ ಒಂದೊಕ್ಕೊಂದು ತಾಳೆಯಾಗುವದೇ ಇಲ್ಲ. ಹಾಗಾಗಿ ಉಡುಪಿ ಮಠದ ಪಂಕ್ತಿ ಭೇದದ ಬಗೆಗಿನ ಇವರ ವಿವರಣೆ ನೈಜ್ಯತೆಗಿಂತ ಬಹಳ ದೂರ ಇರುವದಂತೂ ನಿಶ್ಚಿತ. ಇವುಗಳಲ್ಲಿ ಕೆಲವು ರಾಜಕೀಯ ಹಿತಾಸಕ್ತಿಗನುಗುಣವಾಗಿ ಇವುಗಳ ಅಸ್ತಿತ್ವ ನಿಂತಿರುವದರಿಂದ ಇವರ ವಿರೋಧಗಳೂ ಸಹ ರಾಜಕೀಯ ಲಾಭವನ್ನೆ ಆಶ್ರಯಿಸಿದೆ. ಕೇವಲ ೨೦೦ ಮಂದಿಯೋ ೩೦೦ ಮಂದಿಯೊ ಆಚರಿಸುವ ಪಂಕ್ತಿ ಭೇದ ಲಕ್ಷಗಟ್ಟಲೆ ಬ್ರಾಹ್ಮಣೇತರ ಜನರನ್ನು ಅಸ್ಪೃಶ್ಯರನ್ನಾಗಿ ಮಾಡುತ್ತದೆ ಎನ್ನುವದಕ್ಕಿಂತ ಕಡಿಮೆ ಸಂಖ್ಯೆಯ ಬ್ರಾಹ್ಮಣರನ್ನೆ ಅಸ್ಪೃಶ್ಯರನ್ನಾಗಿ ಮಾಡಿಬಿಡಬಹುದು. ಹಾಗಿದ್ದಾಗ ಪಂಕ್ತಿಭೇದವನ್ನು ಬ್ರಾಹ್ಮಣೆತರರನ್ನು ತುಳಿಯುತ್ತದೆ, ಅಮಾನವೀಯ ಎನ್ನುವದು ತರ್ಕಕ್ಕೆ ನಿಲುಕುವದಿಲ್ಲ.
ಕೊನೆಯದಾಗಿ ಹೇಳಬೇಕೆಂದರೆ ಪಂಕ್ತಿ ಭೇದ ಎನ್ನುವದು ಸಮಸ್ಯೆಯೇ ಅಲ್ಲ. ಸಾಂಸ್ಕೃತಿಕ ವಲಯದಲ್ಲಿ ಹುಟ್ಟಿಕೊಂಡ ಗೊಂದಲಗಳಿಂದಾಗಿ ನಮಗೆ ಸಮಸ್ಯೆ ಎನಿಸಿದೆ. ಮಠ ಎನ್ನುವದು ಸಾರ್ವಜನಿಕರ ಆಸ್ತಿಯಾಗಿದ್ದರೆ ಕಾನೂನು ಹೋರಾಟ ಮಾಡಬಹುದು. ಹಾಗೆ ಕಾನೂನು ಹೋರಾಟ ಮಾಡುವಾಗ ಜಾತಿಯ ಬಗ್ಗೆ ಚರ್ಚಿಸುವ ಅಗತ್ಯವೇ ಇಲ್ಲ. ಖಾಸಗಿಯಾಗಿದ್ದರೆ, ಅವರ ಸಂಪ್ರದಾಯವನ್ನು ಅವರಿಗೇ ಬಿಟ್ಟು, ಅಲ್ಲಿಗೆ ಹೋಗದೆ ನಿರ್ಲಕ್ಷಿಸಬಹುದು. ಅದರಿಂದ ಕೆಲವೇ ಕೆಲವು ಜನರಿರುವ ಮಠಗಳು ಜನಮಾನ್ಯತೆಯನ್ನು ಕಳೆದುಕೊಳ್ಳಬಹುದೆ ಹೊರತೂ ಜನರು ಏನನ್ನೂ ಕಳೆದುಕೊಳ್ಳುವದಿಲ್ಲ.

No comments:

Post a Comment